- ಭ್ರಮರಿ ಶಿವಪ್ರಕಾಶ್, ಯು.ಎಸ್.ಎ.
ಕರಾವಳಿ ಕರ್ನಾಟಕದ ಗಂಡು ಕಲೆ ಯಕ್ಷಗಾನದ ಉಳಿವಿಗಾಗಿ ಮತ್ತು ವೃತ್ತಿ ಕಲಾವಿದರ ಹಿತರಕ್ಷಣೆಗಾಗಿ ಗುಂಪು ವಿಮೆ, ಆರೋಗ್ಯ ವಿಮೆ ಮುಂತಾದ ಬೃಹತ್ ಯೋಜನೆಗಳನ್ನು ಹಮ್ಮಿಕೊಂಡಿರುವ ಸಂಸ್ಥೆ ಉಡುಪಿಯ ಯಕ್ಷಗಾನ ಕಲಾರಂಗ (ರಿ). ಇವರ ಯೋಜನೆಗೆ ಸಂಪುರ್ಣ ಬೆಂಬಲ ನೀಡಲು ಹುಟ್ಟಿಕೊಂಡಿರುವ ಬಳಗ ಹ್ಯೂಸ್ಟನ್ ನ ವಾಸುದೇವ ಐತಾಳ್ ನೇತೃತ್ವದ ಯಕ್ಷಗಾನ ಕಲಾವೃಂದ, ಯುಎಸ್ಎ. ಸಾಂಪ್ರದಾಯಿಕ ಯಕ್ಷಗಾನದ ಪರಿಚಯ ಭಾರತೀಯರಿಗೂ ಅಲ್ಲದೆ ವಿದೇಶೀಯರಿಗೂ ಆಗಬೇಕೆಂಬ ಸದುದ್ದೇಶದಿಂದ ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶನಗಳನ್ನು ನೀಡುತ್ತಿದ್ದಾರೆ. ಅಂಥ ಎರಡು ಪ್ರದರ್ಶನಗಳು ಮೊನ್ನೆ ನ್ಯೂ ಯಾರ್ಕ್ ನ್ಯೂಜೆರ್ಸಿಯಲ್ಲಿ ನಡೆದವು. ಇದನ್ನು ಆಯೋಜಿಸಿದವರು ಡೌನ್ ಜೆರ್ಸಿ ಫೋಕ್ ಲೈಫ್ ಸೆಂಟರ್ ಮತ್ತು ಹಿಂದೂ ಸಮಾಜ ದೇವಸ್ಥಾನ, ಪುಕಿಪ್ಸಿ ನ್ಯೂಯರ್ಕ್.
ನ್ಯೂ ಜೆರ್ಸಿಯ ಫೆಸ್ಟಿವಲ್ ಆಫ್ ಇಂಡಿಯಾ ಇದರಲ್ಲಿ ಯಕ್ಷಗಾನದ ಬಗ್ಗೆ ಕಿರು ಸೋದಾಹರಣ ಉಪನ್ಯಾಸ ಮತ್ತು ಪಂಚವಟಿ ಪ್ರಸಂಗವನ್ನು ಕಲಾವೃಂದದವರು ಅತ್ಯಂತ ಪರಿಣಾಮಕಾರಿಯಾಗಿ ಪ್ರದರ್ಶಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಸಭಿಕರಲ್ಲಿ ಕನ್ನಡಿಗರ ಸಂಖ್ಯೆ ಹೆಚ್ಚಿಲ್ಲದರ ಕಾರಣ ಉಳಿದ ಭಾರತೀಯರು ಮತ್ತು ಅಮೇರಿಕನ್ನರಿಗೆ ರಾಮಾಯಣದ ಕಥೆ ಸುಲಭವಾಗಿ ಮನಮುಟ್ಟುವಂತಾಯಿತು. ನ್ಯೂಯಾರ್ಕಿನಲ್ಲಿ ಜಾಂಬವತಿ ಕಲ್ಯಾಣದ ಕಥೆ ನೆರೆದ ಭಕ್ತರೆಲ್ಲರಿಗೆ ಶಮಂತಕೋಪಾಖ್ಯಾನದ ಸಂದೇಶವನ್ನು ನೀಡಿತು.
ಕಲಾವಿದರಾಗಿ ಡಾ. ರಾಜೇಂದ್ರ ಕೆದ್ಲಾಯ, ಡಾ. ರಮೇಶ್ ಕೇಕುಡ, ಶ್ರೀ ಶಶಿಧರ ಸೋಮಯಾಜಿ, ಶ್ರೀ ಆದಿತ್ಯ ಸೀತಾರಾಮ್, ಶ್ರೀಮತಿ ಸೌಮ್ಯಶ್ರೀ ಆದಿತ್ಯ ಹಾಗೂ ಶ್ರೀ ವಾಸುದೇವ ಐತಾಳರು ವಿವಿಧ ಪಾತ್ರಗಳಲ್ಲಿ ಮಿಂಚಿದರು. ವೇಷಭೂಷಣ ಸಹಾಯ ಹಾಗೂ ಧ್ವನಿ ಮುದ್ರಿತ ಹಿನ್ನೆಲೆ ಸಂಗೀತದ ನಿರ್ವಹಣೆ ಡಾ. ಉದಯ ತಂತ್ರಿ ಇವರದ್ದು. ಧ್ವನಿ ಮುದ್ರಿತ ಹಿನ್ನೆಲೆ ಸಂಗೀತವನ್ನು ಒದಗಿಸಿದವರು ಉಡುಪಿಯ ಅಂಬಲಪಾಡಿ ಲಕ್ಷ್ಮೀ ಜನಾರ್ದನ ಮಹಾಕಾಳಿ ಯಕ್ಷಗಾನ ಸಂಘದ ಕೆ ಜೆ ಗಣೇಶ್ ಸಹೋದರರು. ಯಕ್ಷಗಾನ ಕಲಾರಂಗ, ಸಮೂಹ ಉಡುಪಿ ಇವರು ೨೦೦೪ರಲ್ಲಿ ಅಮೇರಿಕಾದುದ್ದಗಲದಲ್ಲಿ ನೀಡಿದ ಸಾಂಪ್ರದಾಯಿಕ ಹಾಗೆ ಪ್ರಯೋಗಾತ್ಮಕ ಯಕ್ಷಗಾನ ಪ್ರದರ್ಶನಗಳನ್ನು ಸ್ಫೂರ್ತಿಯಾಗಿರಿಸಿಕೊಂಡು ಮುಂದಡಿಯಿಡುತ್ತಿರುವ ಯಕ್ಷಗಾನ ಕಲಾವೃಂದ, ಯುಎಸ್ಎ ಬಳಗದವರ ಇಂಥ ಪ್ರಯತ್ನಗಳು ಸ್ತುತ್ಯರ್ಹ.








