ಸ್ವಗತ
 •    •  
tvsnew.JPG

 

                                -ತ.ವಿ.ಶ್ರೀನಿವಾಸ, ಮುಂಬೈ

ಅಪ್ಪಾ - ತತ್ತಾ ನಾಕಾಣೆ! ನಾಕಾಣೆ, ನಾ ಕಾಣೆ - ಈಗೆಲ್ಲಿದ್ಯೋ ಕಾಸು - ಎಲ್ಲೆಲ್ಲಿ ನೋಡಿದ್ರೂ ನೋಟು, ಲೋಟು, ಗಿಲಾಸು, ಬರೀ ಲಾಸು.


ಇದೇನೋ ಏರ್ ಕಟಿಂಗ್ ಸಲೂನಾ? ಅಲ್ವೊ ಲೇ ಕೋತಿ - ಒಂದೇ ಕನ್ನಡಿ ಇದ್ರೆ ಅದು ಮನೆ ಅಲ್ವೇನೋ! ಸಲೂನಿನಲ್ಲಿ ನಾಲ್ಕೂ ಕಡೆ ಕನ್ನಡಿ ಇರತ್ತಲ್ವೇನೋ ಗೂಬೆ!!

ಲೇ ಮೊಂಡು ಮೂಗು ಮೂದೇವಿ, ಬಾಯಿ ತೆಗಿ ಅನ್ಬೇಡಲೇ! ಮುಂದಿನ ಮೂರು ಹಲ್ಲು ಅರ್ಧ ಉದುರಿವೆ - ಇಲ್ಲ ಕಣೋ, ನಿನ್ನೆ ಒದೆಸಿಕೊಂಡದ್ದಕ್ಕಲ್ಲ, ಮೋರಿ ದಾಟಕ್ಕೆ ಹೋಗಿ, ಮುಗ್ಗುರಿಸಿ ಬಿದ್ದಾಗ ಮುರಿದು ಹೋಗಿವೆ. ಇನ್ನರ್ಧ ಉಳಿದಿದೆ, ಅದೇನೋಪ್ಪ - ಹಲ್ಲು ಹಾಗೇ ಉಳಿಯತ್ತೆ, ಮತ್ತಿನ್ನು ಮುಂದಕ್ಕೆ ಹುಟ್ಟೋಲ್ಲ ಅಥವಾ ಬೆಳ್ಯೋಲ್ಲ ಅಂತ ಯಾರೋ ಹೇಳ್ತಿದ್ರು. 


ನಾನೊಬ್ಬ ಹುಡುಗ - ಗೊತ್ತಾಗತ್ತಪ್ಪ ನೀನೇನ್ ಹೇಳ್ಬೇಡ ಅನ್ಬೇಡ್ರೀ, - ನನ್ನ ಹೆಸರು ಸುಂದರ - ನನ್ನಮ್ಮ ಕರೆಯೋದು ಸುರಸುಂದರಾಂಗ, ಅಯ್ಯಯ್ಯೋ ಸುಂದರಾಂಗ ಅಂತ ಹೇಳಿ, ಕೋಲ್ಮೂತಿ ಕಾಶೀನಾಥ ಅವರಿಗೆ ಹೋಲಿಸ್ಬೇಡ್ರಪ್ಪಾ, ಸುಂದ್ರೂ ಅಂದ್ರೂ ಸಾಕು, ಓಯ್ ಹುಡ್ಗ ಅಂದ್ರೂ ಸಾಕು - ನನ್ನಪ್ಪ ಕರೆಯೋದು ಅಂಗಿ ಹಾಕಿರೋ ಮಂಗ ಅಂತ. ಶಾಲೆಯಲ್ಲಿ ಎಲ್ಲರೂ ನನ್ನನ್ನು ಕರೆಯೋದು ರಾಜಕುಮಾರ ಅಂತ - ಅಲ್ವೇ ಒಂದ್ಸಲ ನನ್ ಮುಖ ನೋಡಿ, ಅಲ್ಲಲ್ರೀ - ಕನ್ನಡಿಯಲ್ಲಲ್ಲ, ಮುಂದೆ ಬಂದು ನಿಂತ್ಕೊಂಡು ನನ್ ಮುಖ ನೋಡ್ರೀ, ನಾನ್ ಹೇಗ್ ಕಾಣ್ತಿದ್ದೀನಿ ಅಂತ. ಹೌದು - ಹುಟ್ಟಿದಾಗಿಂದ್ಲೂ ನಾ ಹಿಂಗೇನೇ! ಸ್ಫುರದ್ರೂಪಿ - ಮನ್ಮಥನಪರಾವತಾರ - ಅಯ್ಯಯ್ಯೋ ಮಣ್‍ಮೆತ್ತ ಅನ್ಬೇಡ್ರೀ, ಮನ್ಮಥ, ಮನ್ ಮಥ. ಅಪ್ಪಟ ಕನ್ನಡಿಗ, ನಮ್ಮಮ್ಮ ಕನ್ನಡದೋರು ರೀ, ಅಕ್ಕಪಕ್ಕದವ್ರೆಲ್ರೂ ಅವರನ್ನ ಕನ್ನಡಮ್ಮ ಅಂತಾನೇ ಕರ್ಯೋದು, ಯಾಕೇಂದ್ರೆ ಅಕ್ಕ ಪಕ್ಕದವರ್ಯಾರಿಗೂ ಕನ್ನಡ ಬರೋಲ್ಲ, ಹೌದಲ್ವೇ! ಬೆಂಗಳೂರಿನಲ್ಲಿ ಕನ್ನಡ ಮಾತನಾಡೋವ್ರು ಇದಾರಾ. ಭೂತಗನ್ನಡಿಯಲ್ಲಿ ನೋಡ್ಬೇಕಾ. ಹುಂ! ಏನ್ಮಾಡೋದು, ಅಕ್ಕ ಪಕ್ಕದ ರಾಜ್ಯದವ್ರನ್ನೆಲ್ಲಾ ಏನು, ದೂರದ ಬಿಹಾರಿ, ಯುಪಿಯವರನ್ನೆಲ್ಲಾ ಕರೆದು ತಂದು ನಾವು ಮಾತ್ರ ಊರ ಹೊರಗಿದ್ದೀವಿ, ಹೌದು ನಮ್ಮದು ದೊಡ್ಡ ಮನಸ್ಸು, ದೊಡ್ಡ ಹೃದಯ, ಇತರರಿಗೆ ಮನ್ನಣೆ ಕೊಟ್ಟು, ಮನೆ ಕೊಟ್ಟು, ಮಣೆ ಹಾಕಿ ಊಟಕ್ಕೆ ಹಾಕಿ, ನಾವು ಮಾತ್ರ ಮನೆಯಿಂದಾಚೆಗೆ ಹೋಗಿ, ಉಪವಾಸ ಮಲಗ್ತೀವಿ, ಇದೇ ನಮ್ಮ ದೊಡ್ಡತನ, ದಡ್ಡತನ. ಇನ್ನು ಸಾವಿರ ವರ್ಷ ಆದ್ರೂ ನಮ್ಗೆ ಬುದ್ಧಿ ಬರೋಲ್ಲ ರೀ. ಇತರೆ ಭಾಷೆಯವರನ್ನು ನೋಡಿ ಕಲೀಬೇಕು, ಆದ್ರೆ ಕಲಿಯೋಕೆ ಯಾಕೋ ಮನಸ್ಸೇ ಇಲ್ವಲ್ಲ. ತಲೇನೇ ತಿರುಗೋಲ್ಲ ಅನ್ನತ್ತೆ. ಯಾರದ್ರೂ ಶಾಕ್ ಕೊಟ್ರೆ ತಲೆ ಸ್ವಲ್ಪ ಗಿರ್ ಅನ್ಬೋದೇನೋ!!!


ಲೇ! ತಲೆ ಕೂದಲು ಮುಟ್ಬೇಡಲೇ - ಕೆದರಿಹೋಗತ್ತೆ, ಮೊದ್ಲೇ ಎಣ್ಣೆ ಬೇರೆ ಹಾಕಿಲ್ಲ. ಕಷ್ಟಪಟ್ಟು ಬಾಚ್ಕೊಂಡಿದ್ದೀನಿ. ಅಮ್ಮ ಒಂದ್‍ಕ್ಷಣದಲ್ಲಿ ಬಾಚ್ಬಿಡ್ತಾಳೆ. ಆದ್ರೆ ಇವತ್ಮಾತ್ರ, ನಾನೇ ಅವ್ಳಿಗೆ ಹೇಳ್ದೆ, ನೀನೇನ್ ಬಾಚ್ಬೇಡ, ನಾ ದೊಡ್ಡನಾಗಿದ್ದೀನಲ್ಲ, ನಾನೇ ಬಾಚ್ಕೋತೀನಿ ಅಂತ. ಈ ರೀತಿ ಸೆಟ್ಟಿಂಗ್ ಮಾಡಕ್ಕೆ ಅರ್ಧ ಘಂಟೆ ಆಗಿದೆ ಗೊತ್ತಾ? ಮತ್ತಿನ್ನೊಂದು ತಿಂಗ್ಳಾದ್ಮೇಲೆ ಮುನಿಯನ ಹತ್ರ ಸೆಟ್ ಮಾಡ್ಸ್ಕೋಬೇಕು. ಈ ಸಲ ಶಾರೂಕ್ ಕಟ್ ಮಾಡ್ಸ್ಕೊಬೇಕು. ಆದ್ರೆ ಆ ಹುಚ್ಮುಂಡೆ ಹೆಚ್‍ಎಮ್ ಇದ್ದಾಳಲ್ಲ, ಸಣ್ಣಗೆ ಕಟ್ ಮಾಡ್ಸಿಕೊಳ್ದಿದ್ರೆ, ತಲೆಗೆ ಕ್ಲಿಪ್ ಹಾಕ್ಬಿಡ್ತಾಳೆ. ಈ ದರಿದ್ರ ಸ್ಕೂಲ್ ಯಾವಾಗ ಮುಗಿಯತ್ತೋ, ಕಾಲೇಜ್ಗೆ ಯಾವಾಗ ಹೋಗ್ತೀನೋ ಏನೋ. ಕಾಲೇಜ್ನಲ್ಲಿ ಹೇಗ್ಬೇಕಾದ್ರೂ ಹೋಗ್ಬೋದಂತೆ, ಗೊತ್ತಾ. ಹರ್ದಿರೋ ಪ್ಯಾಂಟ್ ಹಾಕ್ಕೊಳೋದೂ ಒಂದು ಸ್ಟೈಲ್ ಅಂತೆ. ಅಯ್ಯೋ ಕಾಡು ಹರಟೆ ಹೊಡ್ಯೋದೇ ಆಯ್ತು - ನನ್ಜೊತೆ ಯಾರಿದ್ದಾರೆ ಮಾತಾಡಕ್ಕೆ. ಶಾಲೆಯಲ್ಲಿ ಎಲ್ಲರೂ ನನ್ನನ್ನು ಮುಸುಂಡಿ ಅಂತ ಮಾತನಾಡಿಸೋದೇ ಇಲ್ಲ. ಈ ಕನ್ನಡಿ ಒಂದೇ ನನ್‍ಪಾರ್ಟಿ. ನನ್ನನ್ನು ನೋಡ್ಕೊಂಡು, ನಾನೊಬ್ನೇ ಮಾತಡ್ಕೋಬೋದು. ಆದ್ರೆ ಹಿಂದೆಯಿಂದ ಯಾರಾದ್ರೂ ಬಂದೋರು, ಏನೋ ಹುಚ್ಚ ಅಂತಾರೆ. ಅಮ್ಮ ಒಬ್ಳೇ ಸರಿ. ಸುಮ್ನೆ ನಕ್ಕು, ತಲೆ ಸವರಿ ಹೋಗ್ಬಿಡ್ತಾಳೆ. 


ಸ್ಕೂಲಿಗೆ ಹೊರಡೋ ಸಮಯ ಆಗ್ತಾ ಬಂತು. ಕನ್ನಡಿ ಮುಂದೆ ನಿಂತೇನದು ಕೋತಿ ಮೂತಿ ಮಾಡ್ತಿದ್ದೀಯೆ? ಸರಿ ನಾನಿನ್ನು ಹೊರಡ್ತೀನಿ. ಸಂಜೆ ಬಂದ್ಮೇಲೆ ಮಾತಾಡೋಣ, ಆಯ್ತಾ? 


ನಾನೇ ರಾಜಕುಮಾರ - ಕನ್ನಡ ತಾಯಿಯ ಪ್ರೀತಿಯ ಕುವರ

ಅಳಿಸಿ ನ್ಯಾಯವ ಉಳಿಸಿ, ಶಾಂತಿಯನಿಳಿಸಲು ಬಂದ ಪ್ರೇಮ ಕಿಶೋರ 

ರಾಜ್ ಕುಮಾರ್...s

 

AttachmentSize
uniform.jpg25.52 KB
tvsnew.JPG4.13 KB

Syndicate

Syndicate content