ಒಂದಾನೊಂದು ಕಾಲಕ್ಕೆ ಕುಂದೂರಿನಿಂದ ಮೂಡಲಕ್ಕೆ ಒಂದು ಊರು. ಹೆಸರು ಮೂಡನಹಳ್ಳಿ. ಆ ಒಂದು ಹಳ್ಳಿಯವೊಳಗೆ ಇರುತಕ್ಕ ನೂರಾರು ಮನೆಯೊಳಗೆ ಸಾವಿರಾರು ಜನರೊಳಗೆ ಕುಂಬಾರ ಸಣ್ನಯ್ಯನೆಂಬೋನು ಬೆಳಗಾಗ ಎದ್ದು, ಪೂಜೆ ವೃತಾದಿಗಳನ್ನು ತಪ್ಪದೆ ಮಾಡಿ ನೋಡಿದವರು ಅವನನ್ನು ಮುಂದೆ ಬ್ರಾಹ್ಮಣೆಂದೂ ಹಿಂದೆ ಹಾರುವಯ್ಯನೆಂದೂ ಹಾಡಿ ಹೊಗಳುತ್ತಿರಲಾಗಿ, ಸಣ್ಣಯ್ಯ ರಾಮಕ್ಕ ಎಂಬೊ ದಂಪತಿಗಳಿಗೆ ಕಮಲಿ ಒಬ್ಬಳೆ ಮಗಳಾಗಿ ಶಿವನೆಂಬೊ ದೇವರ ವರದಿಂದ ಹುಟ್ಟಿದವಳಾಗಿ ನೋಡಿದವರ ಕಣ್ಣಲ್ಲಿ ಆಸೆ ಮೂಡಿಸುವ ಹುಣ್ಣಿವೆಯ ಬೆಳದಿಂಗಳಾಗಿ ಬೆಳೆದು ಬೆಳೆದು ಬಳುಕುತ್ತಿರಲು, ಇತ್ತ ಊರಿನವರೆಲ್ಲ ದೇವರೆಂದು ಕರೆಯುವ ಗುಂಡೇಗೌಡನೆಂಬ ಬಾರಿ ಆಳಿನ ಒಬ್ಬನೆ ಮಗನಾಗಿ ಬೆಳ್ಳಿಯ ಚಮಚಾವ ಬಾಯಲ್ಲೆ ಇಟ್ಟುಕೊಂಡು ಹುಟ್ಟಿದ ಬಾಲಕ ಮರಿಯಾನೆಯು ವಿದ್ಯೆ ಕಲಿಯೋದು ಎಷ್ಟೊಂದು ಸುಲಭ ಎಂದು ಊರವರೆಲ್ಲ ಬಾಯಿಯ ಮೇಲೆ ಬೆರಳಿಟ್ಟುಕೊಳ್ಳುತ್ತಿರಲಾಗಿ, ಎಲ್ಲ ನೋಡುನೋಡುತ್ತಿರುವಂತೆ ಏಳೆಂಬ ಕ್ಲಾಸನ್ನು ಒಂದೇ ಬಾರಿಗೆ ಪಾಸ್ ಅನ್ನಿಸಿಕೊಂಡು ಮುಂದೆ ಓದೊಕೆ ಪ್ಯಾಟೆಗೆ ಹೊರಟವನೆ.
ಪ್ಯಾಟೆಗೆ ಹೊರಡೋಕು ಮುಂಚೆ ಹುಟ್ಟಿಸಿದ ಅಪ್ಪ ಅಮ್ಮಗಳಿಗೆ ಊರಿನ ಹಿರಿಯರಿಗೆ ಕಾಲಿಗೆ ಹಣೆಮುಟ್ಟಿಸಿ ನಮುಸ್ಕಾರವೆಂಬ ಶಾಸ್ತ್ರವನು ಅಪ್ಪ ಅಮ್ಮಗೆ ತೃಪ್ತಿಯಾಗುವವರಗೆ ಮತ್ತೆಮತ್ತೆ ಮಾಡಿ, ಊರ ಮುಂದಿನ ಗುಡಿಗೆ ಬಂದು ಶಿವನಿಗೂ ಕೈಮುಗಿದು ಹಣೆಯನ್ನು ನೆಲಕ್ಕೆ ತಾಕಿಸಿ ಭಕ್ತಿಯಿಂದ ಮುಚ್ಚಿದ ಕಣ್ಣುಗಳ ಬಿಟ್ಟುನೋಡಿದರೆ ಶಿವನೆಂಬ ದೇವರ ಬದಲಾಗಿ ಸಣ್ಣಯ್ಯ ರಾಮಕ್ಕ ದಂಪತಿಗಳ ಒಬ್ಬಳೇ ಮಗಳು ಕಮಲಿಯು ಕಣ್ಣರಳಿಸಿ ಮರಿಯಾನೆಯನ್ನೆ ನೋಡುತ್ತಿದ್ದಳು. ಪ್ಯಾಟೆಗೆ ಹೊರಡೊ ಒಪೊತ್ತಿನೊಳಗೆ ಮೂರುಮೂರು ಬಾರಿ ಕಮಲಿಯ ಕಣ್ಣಲ್ಲಿ ತುಂಬಿಕೊಂಡ ಮರಿಯಾನೆ- ಅಪ್ಪನ ಹಿಂದೆ ಗಾಡಿ ಹತ್ತಿ ಪ್ಯಾಟೆ ಸೇರಿ ಶಾಲೆ-ಮಾವನ ಮನೆ, ಮಾವನ ಮನೆ-ಶಾಲೆ ಹೀಗೆ ವಾಕಿಂಗ್ ಮಾಡುತ್ತಿದ್ದ ಮರಿಯಾನೆ ಕಣ್ಣಿಗೆ ಬಿದ್ಡ ಬಾಲೆಯರೆಲ್ಲ, ಪುಸ್ತಕದಲ್ಲಿದ್ದ ಚಿತ್ರ ರೂಪದ ಹೆಣ್ಣುಗಳೆಲ್ಲ, ಶಿವನ ಎದುರಿಗೆ ಕಂಡಂತ ಕಮಲಿಯೇ ಆಗಿದ್ದರು. ಸಪ್ಪಗೆ ತೆಪ್ಪಗೆ ಮೂಲೆಯಲ್ಲಿ ಕುಳಿತ ಸೋದರಳಿಯನನ್ನು ಕಂಡ ಅತ್ತೆವ್ವ ಊರು ಬಿಟ್ಟು ಬಂದಿದ್ದ ಬೇಸರಕ್ಕೆ ನನ್ನಳಿಯ ಮರಿಯಾನೆ ಅಪ್ಪ ಅವ್ವಾರ ನೆನೆಸಿಕೊಂಡು ಸೊರಗಿ ಹೋಗ್ಯಾನು ಎಂದು ಲಲ್ಲೆಗರೆದು ಊಟ ಇಕ್ಕುತ್ತಿರವದ ಕಂಡ ಅತ್ತೆಯ ಮಗಳು ಇಂಗ್ಲೀಷ್ ಕಲಿತ ಸರಸಿ ಎಂಬಾಕೆ ನಕ್ಕುಬಿಟ್ಟಳು baby, baby ಎಂದು. ಇತ್ತ ಮೂಡನಹಳ್ಳಿಯ ಪಡ್ಡೆ ಹುಡುಗರಿಗೆಲ್ಲ ಕಚುಗುಳಿ ಇಡುವಂತೆ ಬೆಳೆಯುತ್ತಿದ್ದ ಕಮಲಿಯ ಕಣ್ಣೊಳಗೆ ಅಂದು ಶಿವನೆಂಬ ದೇವರ ಗುಡಿಯಲ್ಲಿ ತುಂಬಿಕೊಡ ಮರಿಯಾನೆಯ ಚಿತ್ರವಲ್ಲದೆ ಬೇರೆ ಯಾರೂ ಮೂಡಲೇ ಇಲ್ಲ. ಹೀಗಿರಲಾಗಿ ಅದೊಂದು ದಿನ ರಾತ್ರಿ ಮರಿಯಾನೆಯ ಕನಸಿನಲಿ ಬಂದ ಕಮಲಿ ಚಂದ್ರನೆಂತೆ ನಕ್ಕಳು. ಹಕ್ಕಿಯಂತೆ ಹಾರಿದಳು. ಜೇನಿನಂತೆ ಹಾಡಿದಳು. ಮರಿಯಾನೆ ಅವಳೊಡನೆ ಕುಣಿಕುಣಿದು ನೆಗೆನೆಗೆದು ಬೀಳುವಾಗ ಮಲಗಿದ್ದ ಮಂಚದ ಮೇಲಿಂದ ದೊಪ್ಪೆಂದು ಬಿದ್ದು ಕೈಯನ್ನೆ ಮುರಿದುಕೊಳ್ಳಲಾಗಿ, ಆಗಲೆ ಮೈನೆರೆದು ನಿಂತಿದ್ದ ಅತ್ತೆಯ ಮಗಳು ಸರಸಮ್ಮ ತನ್ನ ಗಂಡನಾಗೊ ಗಂಡಿಗೆ ಸಕಲ ಸೇವೆಯನ್ನು ಮಾಡುತ್ತಿದ್ದಳು. ಅತ್ತೆಯ ಮಗಳ ಕೈಯಿಂದ ಸೇವೆಯ ಮಾಡಿಸಿಕೊಂಡು ಖುಷಿಗೊಂಡ ಅಳಿಯ ಅತ್ತೆ ಮಾವನಿಗೆ ಖುಶಿಯಾಗೊ ರೀತೀಲಿ ನಗುನಗುತ ಇದ್ರೂನು ಅವರು ಮದುವೆ ಮಾತೆತ್ತಿದರೆ ಮಾತು ಬದಲಿಸುತ್ತ, ಹೇಗ್ಯಾಗೊ ತಪ್ಪಿಸಿಕೊಂಡು, ಇಂಗ್ಲೀಷಿನಲ್ಲಿ ಟುಸ್ಸುಪುಸ್ಸು ಎಂದು ಮೈಮೇಲೆ ಬೀಳಲು ಬರುತ್ತಿದ್ದ ಸರಸಿಗೆ ಬೇಜಾರು ಮಾಡಬಾರದು ಅಂತ ಅವಳು ಮೇಲೆ ಬೀಳೋಕೆ ಬಂದಾಗಲೆಲ್ಲ ಒಂದೊ ಎರಡೊ ಬೆರಳನ್ನು ತೋರಿಸುತ್ತಲೊ, ಹೊಟ್ಟೆ ನೋವು ಅಂತ ಬೊಬ್ಬೆ ಹೊಡಿಯುತ್ತಲೊ ಇದ್ದರು, ಏನಾದ್ರು ಮಾಡಿ ಅವನ ಮೇಲೆ ಬೀಳುತ್ತಿದ್ದ ಸರಸಿಯ ಕಣ್ಣಲ್ಲಿ ಕಮಲಮ್ಮನನ್ನೆ ಕಾಣುತ್ತಿದ್ದ. ಹೀಗೆ ಒಂದೆರಡು ವರ್ಷಗಳು ಜಾರಿ ಹೋಗುವಷ್ಟರಲ್ಲಿ ಸಣ್ನಯ್ಯ ರಾಮಕ್ಕರಿಗೆ ಬೆಳೆದು ನಿಂತ ಮಗಳ ಮದುವೆ ಮಾಡುವ ಯೋಚನೆ ಬರಲಾಗಿ ಜಾತಿ ಮತಸ್ತರು, ಅಲ್ಲದವರು ತಾಮುಂದು ನಾಮುಂದು ಎಂದು ಬೆಳದಿಂಗಳ ಮದುವೆಯಾಗಾಕೆ ನುಗ್ಗೋದ ಕಂಡು ಊರಿನ ದೇವರೆಂಬ ಗುಂಡೇಗೌಡ ಅದೇನೆಂದು ವಿಚಾರಿಸಲಾಗಿ, ಕುಂಬಾರ ಸಣ್ಣಯ್ಯನೆ ನಡುಬಗ್ಗಿಸಿ `ಮಗಳಿಗೆ ಮದುವೆ ಮಾಡಬೇಕಲ್ಲ ದೊರಿ' ಎಂದು ಕೈಮುಗಿದು ಬೇಡಿಕೊಂಡ. ಆಗಲೆ ಅರಳಿ ನಿಂತ ಕಮಲಿಯ ಕಣ್ಣರಳಿಸಿ ನೋಡಿದ ಗೌಡನಿಗೆ ಒಳಗೆಲ್ಲೊ ತಣ್ಣಗೆ ಅದೇನೊ ಹರಿದಂತಾಗಿ, `ಸಣ್ಣಯ್ಯ, ಇವಳಿಗೆ ಒಪ್ಪುವಂತ ಗಂಡು ಇರೋನು ಒಬ್ಬನೆ' ಎಂದು ಪೀಠಿಕೆ ಇಟ್ಟಾಗ, ಸಣ್ಣಯ್ಯ ಆಸೆಯ ಕಣ್ಣಿಂದ `ಯಾವೂರಲ್ಲಿ ನನ್ನೊಡೆಯ' ಎಂದು ಇನ್ನೂ ಇನ್ನೂ ನಡು ಬಾಗಿಸಲು, ಗೌಡನು ಹುರಿಗಟ್ಟಿದ್ದ ತನ್ನ ಮೀಸೆಯ ಇನ್ನಷ್ಟು ತಿರುವಿ `ಈ ಊರಿನಲ್ಲೆ ಇದಾನೊ ಮಂಕಮಗನೆ' ಎನ್ನಲು ಚೋಜಿಗಗೊಂಡ ಸಣ್ಣಯ್ಯ ಮಾತು ಹೊರಡದೆ ನಿಲ್ಲಲು, ಗೌಡನೆ ಸಣ್ಣಗೆ ದನಿ ಹೊರಡಿಸಿ `ನಿನ್ನ ಮಗಳು ನನ್ನ ಮನೆ ಸೇರಲಿ. ಜಾತಿ ಗೀತಿ ಕಟ್ಕೊಂಡು ಸಾಯ್ಬೇಡ. ಯಾವ ಜಾತಿ ಹೂವಾದ್ರು ಶಿವನ ಪಾದ ಸೇರಿದ್ರೆ ಚೆಂದಾಗಿರ್ತೈತಿ. ಏನಂತಿ' ಎಂದಾಗ, ಸಣ್ಣಯ್ಯನ ರಾಮಕ್ಕನ ಕಮಲಿಯ ಕಣ್ಣಲ್ಲಿ ದೊಡ್ಡದಾಗಿ ಬೆಳದು ನಿಂತವನೆ ಸೂಟುಬೂಟು ಹಾಕಿಕೊಂಡು ನಿಂತಿದ್ದ ಮರಿಯಾನೆ. ಅತ್ತ ಗೌಡನ ಮನೆ ಇತ್ತ ಸಣ್ಣಯ್ಯನ ಮನೆಯಾಗೆ ಮದುವೆ ಕೆಲಸಗಳು ತರಾತುರಿಯಲ್ಲಿ ನಡೆಯುತ್ತಿದ್ದರೆ, ಕೋಣೆ ಬಿಟ್ಟು ಹೊರಡದ ಮದುವಣಗಿತ್ತಿ ಕಮಲಿಗೆ ಏನೊ ಹೊಳೆದಂತಾಗಿ, ಮದುವೆಗೆ ಮೊದಲೊಮ್ಮೆ ಮರಿಯಾನೆಯ ನೋಡೊ ಆಸೆ ಬೆಳೆದು ಬೆಟ್ಟದಂತೆ ಆಗಲು ತಡೆಯದಾದ ಕಮಲಮ್ಮ ತಾಯಿ ತಂದೆಯರ ಮುಂದೆ ಕಣ್ಣೀರ ಹರಿಸಿ ಕೇಳುತ್ತಾಳೆ. `ಅಪ್ಪ. ಈ ಮದುವೆಗೆ ಮೊದಲು ನಾವಾರು ಮರಿಯಾನೆಯ ನೋಡಲೇ ಇಲ್ಲ. ಪ್ಯಾಟೆಲಿ ಓದ್ದೋನು. ಜಾತಿ ಬಿಟ್ಟು ಮದುವೆ ಆಗೋಕೆ ಒಪ್ತಾನೊ ಇಲ್ಲೊವೊ' ಎಂದು ರಾಗ ಎಳೆಯಲು, ಎಲ್ಲೊ ಗೂಬೆ ಕೂಗಿದಂತಾಗಿ ಬೆಚ್ಚಿದ ಸಣ್ಣಯ್ಯ ಗೌಡನ ಮುಂದೆ ನಡು ಬಾಗಿ `ಮರಿಯಾನೆ ಇನ್ನು ಬರ್ಲಿಲ್ಲ. ಮದುವೆ ಮೂರ್ದಿನ ಐತೆ' ಎಂದು ಬೀಗರೆಂಬ ಸಲುಗೆಯಲಿ ಮಾತನಾಡಲು, ಅಡಿಯಿಂದ ಮುಡಿಯವರಗೆ ಸಣ್ಣಯ್ಯನ ಅಳತೆ ಮಾಡಿದ ಗೌಡರು `ಅವನಿಗೇನೊ ಪರೀಕ್ಷೆಯಂತೆ. ಬಂದಾನೇಳು ಮದುವೆಯೊತ್ತಿಗೆ' ಎನ್ನಲು ತೃಪ್ತಿಗೊಂಡ ಸಣ್ಣಯ್ಯ ಮನೆಯಲ್ಲಿ ಹೇಳಿದ್ದು `ಮರಿಯಾನೆಗೆ ಏನೊ ದೊಡ್ಡ ಪರೀಕ್ಷೆಯಂತೆ, ಮದುವೆಯ ದಿನಾನೆ ಬರ್ತಾನಂತೆ' ಎಂದು ಮದುವೆಯ ದಿನವೇನೊ ಬಂತು. ಮರಿಯಾನೆ ಬರಲಿಲ್ಲ. ಸಣ್ಣಯ್ಯ ರಾಮಕ್ಕ ಕಂಗಾಲಾದರು. ಕಮಲಿ ಊಟ ನಿದ್ದೆ ಬಿಟ್ಟಳು. ಅತ್ತ ಗೌಡನ ಮನೆಯಲ್ಲಿ ದಿಬ್ಬಣ ಹೊರಡೊ ಹೊತ್ತಿಗೆ ಗೌಡರೇ ಸ್ವತಃ ಮದುವಣ್ಣನ ವೇಷದಲ್ಲಿ ಬಂದು ಕುದುರೆ ಹತ್ತುತ್ತಿರಲಾಗಿ, ಗೌಡತಿಯ ತಮ್ಮ ಬಸವಣ್ಣ ಅನ್ನೋನು ಅಕ್ಕನ ಮುಖವನ್ನೊಮ್ಮೆ ನೋಡಿ ಅರ್ಜುನ ಬಿಟ್ಟ ಬಾಣದ ವೇಗದಲ್ಲಿ ಸಣ್ಣಯ್ಯನ ಮನೆಗೆ ತಗುಲಿ ಅಲ್ಲೊಂದಿಷ್ಟು ಗಾಯ ಮಾಡಿ ಹಿಂತಿರುಗಿ ಬತ್ತಳಿಕೆಯಲ್ಲಿ ಸೇರಿಕೊಳ್ಳಲು ಬರುತ್ತಿರಲಾಗಿ, ಈ ವಿಷಯ ಹೇಗ್ಯಾಗೊ ಪ್ಯಾಟೆಲಿದ್ದ ಮರಿಯಾನೆಯ ಅತ್ತೆ ಮಾವನಿಗೆ ತಿಳಿದು ನೂರಾರು ಎಕರೆ ಗದ್ದೆ ತೋಟ ಕುಂಬಾರ ಹುಡುಗಿ ಕಮಲಿಯ ಕೊರಳಿಗೆ ಬೀಳೋದ ತಪ್ಪಿಸೋಕೆ ಅಂತ ರಾತ್ರೋರಾತ್ರಿಲಿ ಮರಿಯಾನೆಗು ಸರಸಿಗು ಮದುವೆಯೆಂಬ ಶಾಸ್ತ್ರ ಮುಗಿಸಿ ಗಂಡು ಹೆಣ್ಣು ಕರಕೊಂಡು ಊರಿಗೆ ಬಂದು ಮನೆಯ ಬಾಗಿಲಿಗೆ ಬಂದಿರಲಾಗಿ, ವಿಷಯ ತಿಳಿದ ಗುಂಡೇಗೌಡ, ಮದುವಣ್ಣನ ವೇಷವನ್ನು ಕಳಚಿ ತನ್ನ ದೇವರ ಗೆಟಪ್ ನೀಡೊ ಮಾಮೂಲಿ ಡ್ರೆಸ್ ಮಾಡ್ಕೊಂಡು ಬಂದ ಗೌಡ, ತಂಗಿಭಾವನನ್ನು ಬಾಯಿಗೆ ಬಂದಂತೆ ಬಯ್ಯುತ್ತ ` ಇಲ್ಲಿ ನನ್ನ ಮಗನಿಗೆ ಚಿನ್ನದಂತ ಹುಡುಗಿ ನೋಡಿ ಮದುವೆಗೆ ಬರೋಕೆ ಹೇಳಿ ಕಳುಸಿದ್ರೆ ನೀವೇನೊ ಮಾಡ್ಕಂಡು ಬಂದಿದಿರಲ್ಲ. ಊರವರ ಮುಂದೆ ನಾನ್ಯಾಗೆ ತಲೆ ಎತ್ತಲಿ' ಅಂತ ಗೋಳಾಡುತಿದ್ದನು. ಮರಿಯಾನೆ ಯೋಚನೆ ಮಾಡಿದ. ` ಅಪ್ಪ ನನಗೆ ಮದುವೆ ಮಾಡಲು ಹೊರಟಿದ್ದು, ಅದು ಆ ಕಮಲಿ ಜೊತೆಲಿ. ಆದರೆ ಈ ಅತ್ತೆ ಮಾವ ಸುಳ್ಳು ಹೇಳಿ ನಿಮ್ಮಪ್ಪ ಆ ಕುಂಬಾರರ ಹುಡುಗಿ ಕಟ್ಟಿಕೊತಾನೆ. ನಿನ್ನ ಕೈಗೆ ಚಿಪ್ಪು ಕೊಡ್ತಾನೆ ಅಂತ ಬೆದರಿಸಿ ಸರಸಿನ ನನ್ನ ಕೊರಳಿಗೆ ಕಟ್ಟಿದರು. ನಮ್ಮಪ್ಪ ಎಷ್ಟು ಒಳ್ಳೇನು. ಜಾತಿ ಗೀತಿ ನೋಡದೆ ಕಮಲೀನ ತನ್ನ ಸೊಸೆ ಮಾಡ್ಕೊಳ್ಳಕೆ ಒಪ್ಪವನೆ, ಈ ಅತ್ತೆ ಮಾವ ಹೇಳಿದ್ದು ಬರಿ ಸುಳ್ಳು' ಅಂತ. ಮರಿಯಾನೆಯ ತಲೆಯೊಳಗೆ ಈ ಸರಸಮ್ಮ ಅತ್ತೆ ಮಾವ ಇವರನ್ನ ಕುತ್ತಿಗೆ ಹಿಡಿದು ತಳ್ಳುವ ವಿಚಾರ ಬರುತ್ತಿರಲಾಗಿ, ಗೌಡತಿ, ಗೌಡತಿ ತಮ್ಮ ಮರೆಯಲ್ಲಿ ನಿಂತು ನೋಡುತ್ತಿರಲಾಗಿ, ಸರಸಿಯ ತಾಯಿ ತಂದೆ ಇಂಗು ತಿಂದವರಂತೆ ನಿಂತಿರಲಾಗಿ, ಮರಿಯಾನೆಯ ಅಪ್ಪ ಇನ್ನೂ ತನ್ನ ದೈತ್ಯ ಕಾಳಗವನ್ನು ಕುಣಿಯುತ್ತಿರಲಾಗಿ ಕುಂಬಾರ ಕೇರಿಯಿಂದ ಗೊಳೋ ಎಂಬ ದನಿಯೂ ಸಣ್ಣಯ್ಯ ರಾಮಕ್ಕರ ಅಳುವೂ ಒಟ್ಟೊಟ್ಟಿಗೆ `ಕಮಲಿ ಬಾವಿಗೆ ಬಿದ್ಲು' ಎಂಬ ಕೂಗು ನಡುನಡುವೆಯೂ ಕೇಳಿ ಬರಲಾರಂಭಿಸಿದಾಗ, ಈ ಹಿಂದೆ ತನ್ನ ಸೋದರ ಮಾವ ಕುಂಬಾರ ಕೇರಿಗೆ ಓಡಿದ್ದ ರೀತಿಲೆ ಮರಿಯಾನೆ ಓಡುತ್ತಿರಲು, ಯಾರಾದರು ಕೇಳುತ್ತಿದ್ದಾರೊ ಇಲ್ಲವೊ, ಯಾರಿಗಾದರು ಅರ್ಥವಾಗುತ್ತಿದೆಯೊ ಇಲ್ಲವೊ ಎಂದು ಒಂದು ಕ್ಷಣವೂ ಯೋಚಿಸದೆ ಸರಸಮ್ಮ ಹಾಡಿದಳು ಒಂದು ಇಂಗ್ಲಿಷು ಪದ್ಯ.! Love has pitched his mansion in the place of excrement. [ ಪ್ರೇಮ ನಿಲ್ಲಿಸಿದೆ ತನ್ನ ಮಹಲನ್ನು ಉಚ್ಚೆಯ ಬಚ್ಚಲಿನಲ್ಲಿ]
* * * * * * * * * * * * * * *
ಸತ್ಯನಾರಾಯಣ. ಬಿ. ಆರ್., ಗ್ರಂಥಪಾಲಕರು, ಸುರಾನ ಕಾಲೇಜು, ನಂ. ೧೬, ಸೌತ್ ಎಂಡ್ ರಸ್ತೆ, ಬಸವನ ಗುಡಿ, ಬೆಂಗಳೂರು-೫೬೦ ೦೦೪.









