ಮಿಕ
 •    •  
biligode.jpg

-ಅಬ್ದುಲ್ ಹಮೀದ್ ಪಕ್ಕಲಡ್ಕ

(ಇತ್ತೀಚೆಗೆ ಪ್ರಕಟವಾದ ಬಿಳಿಗೋಡೆ ಕಥಾಸಂಕಲನದಿಂದ ಆಯ್ದ ಕಥೆ)

’ವಿದ್ಯಾಧರ ವಿನಯ ಕುಮಾರ ಅರಸಿನ ಕಟ್ಟೆ, ಒಳಗೆ ಬನ್ನಿ’
ಕರೆ ಬಂದೊಡನೆ ಎದ್ದು ನಿಂತ ವಿನಯ, ಇಂಟರ್ವ್ಯೂಗೆ ಬಂದ ಅಭ್ಯರ್ಥಿಗಳತ್ತ ಒಮ್ಮೆ ಕಣ್ಣು ಹಾಯಿಸಿ ಕರೆಬಂದ ರೂಮಿನತ್ತ ತೆರಳಿದ. ರೂಮಿನ ಒಳಹೊಕ್ಕು ನೋಡಿದರೆ ದುಂಡು ಮೇಜಿನ ಹಿಂಬದಿಯಲ್ಲಿ ಮೂವರು ಮುಖ ಗಂಟಿಕ್ಕಿ ಕುಳಿತ್ತಿದ್ದರು. ನೀಟಾಗಿ ಶೇವ್ ಮಾದಿದ ಮುಖ, ತಿದ್ದಿ ಬಾಚಿದ ತಲೆಕೂದಲು, ಪ್ಯಾಂಟ್, ಶರ್ಟ್, ಕೋಟು, ಟೈ, ಶೂ.... ! ಎಲ್ಲಾ ವಿದೇಶೀ ಅಚ್ಚುಕಟ್ಟು. ವಿನಯನಿಗೆ ಗಾಂಧೀಜಿಯವರ ಮೂರು ಮಂಗಗಳ ನೆನಪಾಯಿತು. ಒಂದು ಸಣ್ಣ ನಗು ಅವನ ಮುಖದಲ್ಲಿ ತೇಲಿ ಹೋಯಿತು.  

’ಗುಡ್ ಮಾರ್ನಿಂಗ್ ಸರ್’
’ಕುಳಿತುಕೊಳ್ಳಿ’
’ಇಷ್ಟು ಉದ್ದದ ಹೆಸರು ಏಕಿಟ್ಟುಕೊಂಡಿರಿ?"ಒಬ್ಬರ ಪ್ರಶ್ನೆ
’ತಂದೆ, ನಾನು ಹಾಗೂ ಊರು ಸೇರಿ ನನ್ನ ಹೆಸರಾಗಿದೆ’
’ಬಿ.ಇ. ಮಾಡಿದ ಬಳಿಕವೂ ಎಂ.ಬಿ.ಎ. ಏಕೆ ಮಾಡಿದ್ದೀರಿ?’ಇನ್ನೊಬ್ಬರ ಪ್ರಶ್ನೆ
’ಬಿ.ಇ. ಮಾಡಿ ಇಂಟರ್ವ್ಯೂಗೆ ಹೋದಾಗೆಲ್ಲ ಎಂ.ಬಿ.ಎ. ಏಕೆ ಮಾಡಲಿಲ್ಲ ಎಂದು ಕೇಳಿದರು, ಅದಕ್ಕೆ.’
’ಎಂ.ಬಿ.ಎ. ಯಲ್ಲಿ ಮುಖ್ಯ ವಿಷಯ ತೆಗೆದುಕೊಂಡದ್ದು ಯಾವುದು?’
’ಮಾರ್ಕೆಟಿಂಗ್’
’ಹೆಚ್.ಆರ್.ಡಿ. ಏಕೆ ತೆಗೆದುಕೊಂಡಿಲ್ಲ?’
’ಮಾರ್ಕೆಟಿಂಗ್ ನನಗೆ ಇಷ್ಟ’
’ಎಂ.ಬಿ.ಎ ಬದಲಿಗೆ ಎಂ.ಸಿ.ಎ ಮಾಡಬಹುದಿತ್ತಲ್ಲ’
’ಕೆಲಸದ ಅವಕಾಶ ಸಿಕ್ಕ ಬಳಿಕ ಮಾಡಲಿದ್ದೇನೆ’
’ಕೆಲಸ ಮಾಡಿದ ಅನುಭವ ಇದೆಯೇ?’
’ಇಲ್ಲ’
’ನೀವಿನ್ನು ಹೋಗಬಹುದು’

ಕೃತಜ್ಞತೆ ಕೂಡಾ ಸಲ್ಲಿಸದೇ ಹೊರಬಂದ ವಿನಯ. ಕೋಪದಿಂದ ಅವನ ಮುಖ ಕುದಿಯುತ್ತಿತ್ತು. ಇದು ಅವನ ೧೭ನೇ ಇಂಟರ್ವ್ಯೂ. ಕಲಿತಷ್ಟೂ ಕಲಿ ಎಂದು ಹೇಳುತ್ತಾರೆಯೇ ಹೊರತು ಉದ್ಯೋಗ ಸಿಗದು. ಉದ್ಯೋಗ ದೊರೆತರಲ್ಲವೇ ಅನುಭವ ಆಗುವುದು? ಉದ್ಯೋಗವೇ ದೊರಕದಿದ್ದರೆ ಅನುಭ ಎಲ್ಲಿಂದ ಬರಬೇಕು? ಮಂಗಳೂರಿನಿಂದ ಬೆಂಗಳೂರು, ಗೋವಾ, ಮುಂಬಯಿ, ಚೆನ್ನೈ ಅಲೆದೂ ಅಲೆದೂ ಅವನ ಕೈಕಾಲುಗಳು ಸೋತುಹೋಗಿದ್ದವು. ತನಗೆ ವಿದ್ಯೆ ಕಲಿಸಿದ ತಂದೆ ತಾಯಿಗಳೇ ತನ್ನ ನಿಜವಾದ ವೈರಿಗಳು. ತನಗೆ ವಿದ್ಯೇಯನ್ನೇ ಕಲಿಸದಿದ್ದರೆ ಕೂಲಿ ಮಾಡಿ ದಿನಕ್ಕೆ ಇನ್ನೂರು ರೂಪಾಯಿ ದುಡಿದು ಮದುವೆಯಾಗಿ ಹೆಂಡತಿಮಕ್ಕಳೊಂದಿಗೆ ನೆಮ್ಮದಿಯಾಗಿರುತ್ತಿದ್ದೆ.  

ರೂಮಿಗೆ ಬಂದವನೇ ಮಲಗಿದವನಿಗೆ ಎಚ್ಚರಾಗಿದ್ದು ಸಂಜೆಗೆ. ಮಂಗಳೂರಿಗೆ ಮರುಪ್ರಯಾಣದ ಟಿಕೇಟು ಖರೀದಿಸಬೇಕೆಂದು ರೂಮಿನಿಂದ ರಸ್ತೆಗಿಳಿದ.

ಗಾಂಧಿನಗರದ ರಸ್ತೆಯಲ್ಲಿ ನಿಧಾನವಾಗಿ ನಡೆದುಕೊಂಡು ಹೋಗುತ್ತಿರುವಾಗ ತಂಪಾದ ಗಾಳಿ ಮುದ ನೀಡಿದರೂ ನಿರುದ್ಯೋಗ ಅವನ ಮನಸ್ಸನ್ನು ಘಾಸಿಗೊಳಿಸಿತ್ತು. ಬೆಂಗಳೂರಿನ ಹಲವು ಬಡಾವಣೆಗಳಲ್ಲಿ ಓಡಾಡಿ ಅವು ಚಿರಪರಿಚಿತವಾಗಿದ್ದವು. ಅಧಿಕಾರ, ವಶೀಲಿ ಇಲ್ಲದೇ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭಸಾಧ್ಯವಲ್ಲವೆಂದು ಮನದಟ್ಟಾಗಿತ್ತು.  

ಕಾರಿನ ಹಾರನ್ ಸಮೀಪದಲ್ಲಿಯೇ ಕಿವಿಗಪ್ಪಳಿಸಿದಾಗ ಭೂಮಿಗಿಳಿದ ವಿನಯ ರಸ್ತೆಯ ಬದಿಗೆ ಸರಿದ. ಅವನನ್ನು ದಾಟಿ ಮುಂದೆ ಹೋದ ಕಾರು ಬಲಬದಿಗೆ ತಿರುಗಿ ನಿಂತಿತು. ಚಾಲಕನ ಸ್ಥಾನದಿಂದ ತರುಣಿಯೊಬ್ಬಳು ಇಳಿದು ತನ್ನತ್ತ ಕೈಬೀಸಿ ಬರುತ್ತಿದ್ದಳು.

ವಿನಯ ಅವಳನ್ನೇ ದೃಷ್ಟಿಸಿದ. ಸುಮಾರು ಇಪ್ಪತ್ತೈದರ ಸುಂದರಿ. ಬೆಲೆ ಬಾಳುವ ಉಡುಗೆ ತೊಡುಗೆ. ಬಿಸಿಲಿನ ಕಷ್ಟಕಾರ್ಪಣ್ಯವಿಲ್ಲದ ಕೋಮಲ ಗಲ್ಲದ ತುಂಟ ನಗೆ ಸೂಸುವ ಕಣ್ಣುಗಳು, ಏನೇನೋ ಮಾನತಾಡಲು ಹವಣಿಸುವ ತುಟಿಗಳು, ಎಲ್ಲೋ ನೋಡಿದ ಚಿರಪರಿಚಿತ ಮುಖ.

’ಹಲೋ, ಕರಾವಳಿ ಫಿಶ್, ಪರಿಚಯ ಸಿಕ್ಕಿತಾ?’
’------------’
’ನಾನು ಕಣೋ, ವಿನಯ ಅಶ್ವಿನಿ, ನಿನ್ನ ಇಂಜಿನಿಯರಿಂಗ್ ಕ್ಲಾಸ್ ಮೇಟ್’
’ಹಲೋ, ನೀನಾ, ಬಯಲು ಸೀಮೆ, ಹೇಗಿದ್ದೀಯಾ?’
’ಚೆನ್ನಾಗಿದ್ದೀನಿ, ಬಾ ಕಾರಲ್ಲಿ ಕುಳಿತು ಮಾತನಾಡುವಾ’
’ಇಲ್ಲಮ್ಮ, ನನಗೆ ಮಂಗಳೂರಿಗೆ ಟಿಕೆಟ್ ತೆಗೆದುಕೊಳ್ಳಲು ಹೋಗಬೇಕು. ರಾತ್ರಿ ಊರಿಗೆ ಹೋಗುತ್ತೇನೆ’
’ತಡೆಯೋ, ಎರೆಡು ವರ್ಷದ ಬಳಿಕ ಸಿಕ್ಕಿದ್ದೀ, ಏನವಸರ, ಬಾ’ ವಿನಯನ ಉತ್ತರಕ್ಕೂ ಕಾಯದೆ ಅಶ್ವಿನಿ ಅವನನ್ನು ಕಾರಿನೆಡೆಗೆ ಎಳೆದುಕೊಂಡು ಹೋಗಿ ಕಾರು ಚಲಾಯಿಸಿದಳು. ಕಾರು ಎಂ.ಜಿ ರಸ್ತೆಯತ್ತ ಸಾಗಿತು.

ಎ.ಸಿ ಹಾಕಿದ ದೊಡ್ಡ ರೂಮು, ದೊಡ್ಡ ಪಂಚತಾರಾ ಹೋಟೆಲಿಗೆ ಕಾರು ಬಂದಾಗ ವಿನಯನಿಗೆ ದಿಗ್ಭ್ರಮೆಯಾಯಿತು. ಹೋಟೆಲಿನ ಮಂದಿ ಮಾಗಧರ ಸ್ವಾಗತದೊಂದಿಗೆ ಒಂದು ರೂಮಿನೊಳಕ್ಕೆ ಅಶ್ವಿನಿಯೊಂದಿಗೆ ವಿನಯ ಆಸೀನನಾದ. ಆಗಲೇ ಸೂರ್ಯಾಸ್ತವಾಗುತ್ತಿತ್ತು.

’ಕುಡಿಯಲು ಏನು ತೆಗೆದುಕೊಳ್ಳುತ್ತೀ? ಕೋಲ್ಡ್ ಯಾ ಹಾಟ್?’
’ಬೇಡ ಅಶ್ವಿನಿ, ನನ್ನ ಮೂಡ್ ಒಳ್ಳೆಯದಿಲ್ಲ, ನನಗೆ ಊರಿಗೆ ಹೋಗಬೇಕು’
’ಏ ಕರಾವಳಿ, ಸುಮ್ಮನಿರು, ಹೆಂಡತಿಯಿಲ್ಲ, ಮಕ್ಕಳಿಲ್ಲ, ಏನವಸರ, ಒಂದು ದಿನ ತಡವಾಗಿ ಹೋಗು ತಿಳಿಯಿತಾ’ ವಿಸ್ಕಿಗೆ ಆರ್ಡರ್ ಮಾಡಿದಳು

ಒಂದು ಪೆಗ್ ಹೊಟ್ಟೆಗಿಳಿಯುತ್ತಿದ್ದಂತೆ ಕತ್ತಲು ನಿಧಾನವಾಗಿ ರೂಮನ್ನು ಆವರಿಸಿತು. ಅಶ್ವಿನಿ ಎದ್ದು ಲೈಟ್ ಹಾಕಿದಳು. ಮಂದ ಬೆಳಕಿನಲ್ಲಿ ಇನ್ನಷ್ಟು ಚೆನ್ನಾಗಿ ಕಂಡಳು.

’ಈಗ ಹೇಳು ಮರಿ, ಬೆಂಗಳೂರಿಗೇಕೆ ಬಂದೆ?’
’ಕೆಲಸ, ಕೆಲಸ, ಕೆಲಸ ಹುಡುಕುತ್ತಿದ್ದೇನೆ. ಇವತ್ತು ಹದಿನೇಳನೇ ಇಂಟರ್ವ್ಯೂ ಆಯಿತು, ಕೋತಿಗಳು ಕೇಳುವ ಹುಚ್ಚು ಪ್ರಶ್ನೆಯಲ್ಲಿಯೇ ಕೆಲಸ ಬೇರೆ ಯಾರಿಗೋ ಆಯಿತು ಎಂದು ತಿಳಿಯಿತು. ಇನ್ನು ಬಂದೂಕ ಹಿಡಿದು ಕಾಡಿಗೆ ಓಡುವುದ್ದೊಂದೇ ಉಳಿದಿರುವುದು.’ ವಿನಯ ಉದ್ವೇಗದಿಂದ ಮಾತಾಡುತ್ತಿದ್ದ.

’ಥೂ, ನಾಚಿಕೆ, ಬರೇ ಮುಗ್ಧ ನೀನು, ಲೋಕದ ವ್ಯವಹಾರ ಒಂದೂ ಗೊತ್ತಿಲ್ಲದೇ ಮಾತಾದುತ್ತೀಯಾ, ಕಲಿಯಬೇಕಮಾ, ನೀನು ಕಲಿಯುವುದು ಇನ್ನೂ ತುಂಬಾ ಇದೆ’ ಅಶ್ವಿನಿ ತೊದಲತೊಡಗಿದಳು.

’ಅಂದರೆ?’
’ನೀನೀಗ ಇಂಟರ್ವ್ಯೂ ಆಗಿ ಬಂದ ಕೆಲಸ ಇಂಜಿನಿಯರಿಂಗ್ ಫೇಲ್ ಆದವರಿಗೂ ಸಿಗುತ್ತದೆ ನೋಡು. ನಿನಗೆ ವಶೀಲಿಯಿಲ್ಲ, ಹಣ ಅಂತಸ್ತೂ ಇಲ್ಲ. ಇವೆರೆಡೂ ನನ್ನ ಬಳಿ ಇದೆ ಗೊತ್ತಾ.’ ಮಾತು ತಡವರಿಸುತ್ತಾ ಬರುತ್ತಿತ್ತು.

’ಹಾಗಾದರೆ ನನ್ನಂತಹವರ ಭವಿಶ್ಯವೇನು?’
’ಹೆದರಬೇಡ ನಾನು ಖಂಡಿತಾ ತೆಗೆಸಿಕೊಡುತ್ತೇನೆ’
ಸಂತಸಗೊಂಡ ವಿನಯ ಊರಿಗೆ ಹೋಗುವ ಚಿಂತೆ ಮರೆತು ಎರಡನೆಯ ಪೆಗ್ ಏರಿಸಿದ.’

’ಅಂದ ಹಾಗೆ ಅಶ್ವಿನಿ, ನೀನೇನು ಮಾಡುತ್ತಿದ್ದೀಯಾ?’
’ಇಂಜಿನಿಯರಿಂಗಿನಲ್ಲಿ ಎರೆಡು ಸಬ್ಜೆಕ್ಟು ಹೋಗಿದ್ದು ನಿನಗೆ ತಿಳಿದಿದೆಯೆಲ್ಲವೇ, ಮತ್ತೆ ನಾನು ಪೂರ್ತಿ ಮಾಡಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ. ನನ್ನ ತಂದೆಗೆ ಇಬ್ಬರು ಹೆಣ್ಣುಮಕ್ಕಳು, ತಂದೆಯ ಫ್ಯಾಕ್ಟರಿಯನ್ನು ನೋಡಿಕೊಳ್ಳುತ್ತಿದ್ದೇವೆ. ವಯಸ್ಸಾದ ತಂದೆಯ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರುವುದರಿಂದ ಎಲ್ಲಾ ರಾಜಕಾರಣಿಗಳ ಪಗಡೆಯಾಟ ಗೊತ್ತು. ತಿಂಗಳಿಗೆ ಮೂರ್ನಾಲ್ಕು ಬಾರಿಯಾದರೂ ರಾಜಧಾನಿಯಲ್ಲಿರಬೇಕಾಗುತ್ತದೆ.
’ಮದುವೆ?’
’ಆಗಿಲ್ಲ ವಿನಯ, ಜವಾಬ್ದಾರಿ ತುಂಬಾ ಇದೆ. ಇದೆಲ್ಲಾ ಮುಗಿದ ಬಳಿಕ ಮದುವೆ ಯೋಚನೆ. ಮದುವೆಯೊಂದೇ ಜೀವನದ ಮುಖ್ಯ ಗುರಿಯಲ್ಲ ತಾನೇ?’
ಅಶ್ವಿನಿ ಕೊನೆಯ ಪೆಗ್ ರೆಡಿ ಮಾಡಿದಾಗ ವಿನಮ್ರನಾಗಿ ತಿರಸ್ಕರಿಸಿದರೂ ದೇಹ ಅವನ ಸ್ಥಿಮಿತದಲ್ಲಿರಲಿಲ್ಲ.

’ಇಲ್ಲ ವಿನಯ್ ನೀನು ನಡೆಯುವ ಸ್ಥಿತಿಯಲ್ಲಿಲ್ಲ. ನನಗೂ ಡ್ರೈವ್ ಮಾಡಲು ಸಾಧ್ಯವಿಲ್ಲ. ಇವತ್ತು ಇಲ್ಲೇ ಇರು, ನಾಳೆ ಹೋದರಾಯಿತು’ ಅಶ್ವಿನಿಯೂ ಮಾತಿನಲ್ಲಿ ಎಡವುತ್ತಿದ್ದಳು.

ವಿನಯನಿಗೆ ಅಶ್ವಿನಿಯ ಮಾತು ಸರಿಕಂಡಿತು. ಅವಳನ್ನೊಮ್ಮೆ ದೃಷ್ಟಿಸಿ ನೋಡಿದ. ಅವಳ ಮುಖದಲ್ಲಿ ಬೇಡಿಕೆಯಿತ್ತು. ಕಾಲೇಜಿನಲ್ಲಿದ್ದಾಗಿನಿಂದಲೂ ನೇರ ಮಾತು. ಏಕ್ ಮಾರ್ ದೋ ತುಕ್ಡಾ. ಕೊಂಕು, ಅಸೂಯೆ, ಅಹಂಕಾರ ಅವಳಲ್ಲಿಲ್ಲ. ಅವಳ ಮಾತಿಗೆ ಒಪ್ಪಿ, ವಿನಯ ಓಲಾಡುತ್ತಾ ಕುಳಿತುಕೊಂಡ. ಕೊನೆಯ ರೌಂಡಿನ ಪೆಗ್ಗಿಗೆ ಗ್ಲಾಸಿಗೆ ತಡಕಾಡುತ್ತಿದ್ದಾಗ ಕೈಗೆ ಕೈ ತಾಗಿತು. ನಿಶೆಯ ಅಮಲಿನಲ್ಲಿ ಮುಂದೆ ನಡೆದ ಅಚಾತುರ್ಯಕ್ಕೆ ಖಾಲಿ ಬಾಟಲಿಗಳು ಸಾಕ್ಷಿಯಾದವು.

ಸೂರ್ಯನ ಕಿರಣಗಳು ಕಿಟಕಿಯಿಂದ ನುಸುಳಿ ಬೆಚ್ಚಗೆ ಮಾಡಿದಾಗಲೇ ವಿನಯನಿಗೆ ಎಚ್ಚರವಾಯಿತು. ಯಥಾ ಸ್ಥಿತಿಗೆ ಬರಲು ಅವನಿಕೆ ಕೆಲಕಾಲ ಹಿಡಿಯಿತು. ರಾತ್ರಿಯ ಘಟನೆಯನ್ನು ನೆನೆದು ಅವನಿಗೆ ನಾಚಿಕೆಯಾಯಿತು. ಅಶ್ವಿನಿ ಎಲ್ಲಿದ್ದಾಳೆ ಎಂದು ರೂಮಿನ ಸುತ್ತಲೂ ಕಣ್ಣಾಡಿಸಿದ. ಅವಳು ಆಗಾತಾನೇ ಸ್ನಾನ ಮುಗಿಸಿ ರೂಮಿನ ಹೊರಗೆ ನಿಂತು ಕೂದಲನ್ನು ಹರಡಿ ಒಣಗಿಸುತ್ತಿದ್ದಳು. ಅರಳಿದ ಕಮಲದಂತಿದ್ದ ಅವಳ ಮುಖದಲ್ಲಿ ಯಾವುದೇ ಪಶ್ಚಾತ್ತಾಪ ಕಂಡುಬರುತ್ತಿರಲಿಲ್ಲ.

ವಿನಯ ಅಶ್ವಿನಿಯ ಬಳಿ ಬಂದ. ಆಕೆ ಹೂನಗೆ ನಕ್ಕಳು. ಅಲ್ಲಿ ಯಾವುದೇ ಅಪರಾಧದ ಛಾಯೇ ಇರಲಿಲ್ಲ.
’ಕ್ಷಮಿಸು ಅಶ್ವಿನಿ’ ವಿನಯ ತಲೆಕೆಳಗೆ ಹಾಕಿದ. 
ಅಶ್ವಿನಿ ವಿನಯನ ಮುಖ ಎತ್ತಿ ಹಿಡಿದು ಅಂದಳು ’ ಇಬ್ಬರ ಅವಶ್ಯಕತೆ ಮೇಳೈಸಿದಾಗ ಕ್ಷಮೆಯ ಮುಖವಾಡದ ಅಗತ್ಯವಿಲ್ಲ’
’ಆದರೂ.....’
’ಆದರೂ ಏನೂ ಇಲ್ಲ. ನಿನ್ನ ಭಾವನೆಗಳಿಗೆ ನಡೆದದ್ದು ಅಚಾತುರ್ಯವಾದರೆ ನನಗದು ಚಾತುರ್ಯ. ಮದುವೆಯಾದರೆ ಪವಿತ್ರ ಬಂಧ, ಆಗದಿದ್ದರೆ ಅನೈತಿಕ ಸಂಬಂಧ. ಇವೆಲ್ಲಾ ನಾವೇ ಮಾಡಿಕೊಂಡ ವ್ಯವಸ್ಥೆಗಳು ಅಷ್ಟೇ.’

’ನೀನು ಬಹಳ ಅರ್ಥಗರ್ಭಿತವಾಗಿ ಮಾತಾಡುತ್ತೀ ಅಶ್ವಿನಿ’
’ಸಮಾಜ ಕಲಿಸಿಕೊಟ್ಟ ಪಾಠ ಇದು’

ಇಬ್ಬರೂ ಬೆಳಗ್ಗಿನ ಫಲಾಹಾರ ಮುಗಿಸಿ ಕಾರಿನಲ್ಲಿ ಕುಳಿತುಕೊಂಡರು. ಅಶ್ವಿನಿಯ ಕಾರು ವಿನಯನ ಹೋಟೆಲಿನ ಹತ್ತಿರ ಬಂದು ನಿಂತಿತು. ಮೊಬೈಲ್ ಫೋನುಗಳ ಸಂಖ್ಯೆಗಳು ವಿನಿಮಯಗೊಂಡವು. ಕೊನೆಯ ಕ್ಷಣ, ಬೀಳ್ಕೊಡಿಗೆ, ವಿನಯನಿಗೆ ಏನು ಮಾದುವುದೆಂದು ತಿಳಿಯಲಿಲ್ಲ. ತನ್ನ ಅಜ್ಜಿ ಹುಟ್ಟುಹಬ್ಬದ ನೆನಪಿಗಾಗಿ ನೀಡಿದ ತನ್ನ ಬೆರಳಿನಲ್ಲಿರುವ ಬಂಗಾರದ ಉಂಗುರವನ್ನು ಹೊರತೆಗೆದು ಅಶ್ವಿನಿಯ ಬೆರಳಿಗೆ ತೊಡಿಸಿದ.  
’ಇದು ನನ್ನ ನೆನಪಿನ ಕಾಣಿಕೆ’ ಕಾರಿನಿಂದಿಳಿಯುತ್ತಲೇ ವಿನಯ ಹೇಳಿದ.
’ಕಾರಿನ ಬಾಗಿಲು ಭದ್ರಪಡಿಸಿ ಕಾರು ಸ್ಟಾರ್ಟ್ ಮಾಡುತ್ತಾ ಅಶ್ವಿನಿ ಅಂದಳು
’ಧನ್ಯವಾದಗಳು ವಿನಯ, ಆದರೆ ನೀನು ನನಗೆ ನೀಡಿದ ಉಡುಗೊರೆ ಕ್ಷಣಕಾಲ ಮಾತ್ರ ನನಪು ಕೊಡಬಲ್ಲುದು. ಆದರೆ ನಾನು ನಿನಗೆ ಆಜೀವಪರ್ಯಂತ ಮರೆಯದ ಉಡುಗೊರೆ ನೀಡಿರುವೆನು’
’ಅಂದರೆ..... ಅರ್ಥವಾಗಲಿಲ್ಲ’ ಕಾರಿನತ್ತ ಬಗ್ಗಿ ವಿನಯ ಪ್ರಶ್ನಿಸಿದ
ಒಂದು ಮಂದಹಾಸ ಬೀರಿ ಅಶ್ವಿನಿ ಅಂದಳು
’ವಿನಯ್ ನಾನು ಏಡ್ಸ್ ರೋಗಿ’
ಕಾರು ಬರ್ರನೇ ಮುಂದೆ ಹೋಯಿತು.

Syndicate

Syndicate content